ಭೀಮನಪಾದ

posted in: History | 0

ರಮಣೀಯ ಪ್ರಕೃತಿಯ ಸೌಂದರ್ಯ. ಝುಳು ಝುಳು ಹರಿಯುವ ಶಾಲ್ಮಲಾ ನದಿಯ ನಿನಾದ. ಅದರ ಜೊತೆ ಪಕ್ಷಿಗಳ ಚಿಲಿಪಿಲಿ ಶಬ್ದ ಸೇರಿ ಪ್ರಕೃತಿಯೇ ಸಂಗೀತಸಂಜೆ ನಡೆಸುತ್ತಿದೆಯೋ ಎಂಬತೆ ಭಾಸವಾಗುತ್ತದೆ. ಮುಸ್ಸಂಜೆಯ ಸಮಯದಲ್ಲಿ ಕುಳಿತು ನದಿಯಂಚಿನಲ್ಲಿನಲ್ಲಿ ಕುಳಿತು ಧ್ಯಾನನಿರತನಾದರೆ ಎಲ್ಲಿಲ್ಲದ ಆನಂದ. ಎಂದೂ ಕಾಣದ ಏಕಾಗ್ರತೆ ನಮ್ಮನ್ನು ಆವರಿಸುವುದಂತೂ ನಿಜ. ಹೌದು ಇದು ಪ್ರಪಂಚದ ಎಲ್ಲಾ ಗೌಜು-ಗದ್ದಲಗಳಿಂದ ದೂರವಿರುವ ಸುಂದರ ತಾಣ. ಮೊದಲು ನಮ್ಮ ಮಠ ಇದ್ದಿತ್ತೆನ್ನಲಾದ ಸಹಸ್ರಲಿಂಗ ಮಠದ ಸ್ಥಳ. ಈಗ ಭೀಮನಪಾದ ಎಂಬ ಸ್ಥಳವೇ ಅದು.

ಭೀಮನಪಾದ ಎಂದರೆ ನಮಗೆ ಒಬ್ಬ ವ್ಯಕ್ತಿಯ ಹೆಜ್ಜೆ ಎಂದು ತಿಳಿಯುತ್ತದೆ. ಹೌದು ಭೀಮನ ಪಾದದಲ್ಲಿ ಸುಮಾರು ಒಂದುವರೆ ಅಡಿಗಿಂತಲೂ ಉದ್ದದ ಎರಡೂ ಪಾದಗಳ ಗುರುತಿದೆ. ಸ್ಥಳ ಪರಿಚಯವಿರುವ ಯಾರನ್ನಾದರೂ ಜೊತೆಯಲ್ಲಿ ಕರೆದುಕೊಂಡು ಹೋದರೆ ಇಲ್ಲಿಯ ಪ್ರತಿಯೊಂದೂ ಅಂಶವನ್ನು ಗಮನಿಸಬಹುದು. ಅನೇಕ ಚಿಕ್ಕ ಚಿಕ್ಕ ಶಿವಲಿಂಗಗಳು, ಅದರ ಪಕ್ಕದಲ್ಲಿ ನಂದಿ, ವಾಸುಕಿಯ ಚಿತ್ರಗಳು. ಆದರೆ ಎಲ್ಲವೂ ನಿಮಗೆ ಸರಿಯಾಗಿ ಗೋಚರಿಸುವುದಿಲ್ಲ. ಇತಿಹಾಸ ಬರಹಗಳಲ್ಲದೇ ಅನೇಕ ವಿಶೇಷ ಚಿತ್ರಗಳನ್ನೂ ನಾವಲ್ಲಿ ಗಮನಿಸಬಹುದು.

                ಸ್ವಲ್ಪ ಕಾಡಿನ ಮಧ್ಯದಲ್ಲಿ ಸಾಗುವ ದಾರಿ. ಅತಿವಿರಳ ಜನರ ಓಡಾಟ. ಇನ್ನೇನು ಮುಂದೆ ದಾರಿಯಿಲ್ಲ ನದಿ ತೀರ ಸಮೀಪಿಸಿದ್ದೇವೆ ಎನ್ನುವಾಗ ನದಿಯ ಮಧ್ಯದಲ್ಲಿ ಬೃಹದಾಕಾರದ ಕಲ್ಲಿನ ಹಾಸು. ಮಧ್ಯ ಮಧ್ಯದಲ್ಲಿ ಆ ಕಲ್ಲನ್ನು ಸೀಳಿಕೊಂಡು ಹರಿಯುವ ನೀರು. ಸ್ವಲ್ಪ ತೇವಭರಿತ ಮರಳು ಮಣ್ಣು ಮಿಶ್ರಿತ ಜಾಗದಲ್ಲಿ ಹತ್ತಾರು ಹೆಜ್ಜೆ ನಡೆದು ಸಾಗಿದರೆ ಮೊದಲು ಕಲ್ಲುಬಂಡೆಯಮೇಲೆ ಗೋಚರವಾಗುವವನೇ ಆದಿಪೂಜ್ಯ ಗಣಾಧಿಪ. ಅಲ್ಲಿಯೇ ಎಡಭಾಗದ ಪ್ರತ್ಯೇಕ ಬಂಡೆಯೊಂದನ್ನು ಗಮನಿಸಿದರೆ ಕಾಣುವುದು ಸ್ವಲ್ಪ ಭಗ್ನಗೊಂಡ ವೇದವ್ಯಾಸರ ಮೂರ್ತಿ. ಹಾಗೇ ಮುಂದೆ ಹೋದರೆ ಎದುರಿಗೆ ಒಂದು ಇತಿಹಾಸವಿರುವ ಶಿವಲಿಂಗ. ಅಲ್ಲಿಂದ ಮುಂದೆ ಪಾದ ಹಾಗೂ ಅನೇಕ ಚಿಕ್ಕ ಶಿವಲಿಂಗಗಳು ಕಾಣಸಿಗುತ್ತವೆ. ಮುಂದೆ ಸಾಗಿದರೆ ತುಂಡರಿಸಿದ ದೇವರ ವಿಗ್ರಹ. ಅನೇಕ ಶಾಸನಗಳೂ ಅಲ್ಲಲ್ಲಿ ಕಾಣಸಿಗುತ್ತವೆ. ಮುಂದೆ ಎರಡು ಬಂಡೆಗಳ ಮಧ್ಯ ಸಿಕ್ಕಿ ಹಾಕಿಕೊಂಡಂತೆ ಭಾಸವಾಗುವ ನಾಗದೇವರ ಕಲ್ಲು. ಅದರ ಎದುರಲ್ಲಿ ಪದ್ಮದಳಗಳ ಮೇಲೆ ಇರುವ ಶಿವಲಿಂಗ. ಅಲ್ಲೇ ಪಕ್ಕದಲ್ಲಿ ಕಲ್ಲಿನ ಬೃಹತ್ ಪೀಠ. ಆದರೆ ಹೋಗುವಾಗ ನಿಧಾನ. ಯಾಕೆಂದರೆ ಸರಿಯಾಗಿ ಗಮನಿಸದೇ ಎಲ್ಲಿಯೂ ಕಾಲಿಡುವಂತಿಲ್ಲ. ಯಾಕೆಂದರೆ ನದಿಯ ಮಧ್ಯದ ಕಲ್ಲುಬಂಡೆಗಳ ಮೇಲೆ ಕೆತ್ತಲಾದ ಈ ಎಲ್ಲಾ ಲಿಂಗಗಳು, ವಿಗ್ರಹಗಳು ಹಾಗೂ ಶಾಸನಗಳು. ಸುಮ್ಮನೇ ನೋಡಿದರೆ ಕಾಣದಷ್ಟು ಚಿಕ್ಕದಾಗಿಯೂ ಇವೆ. ತುಳಿದರೆ ಮಹಾಪಾಪಕ್ಕೆ ಗುರಿಯಾಗಬೇಕಾದೀತು.

ಲೇಖಕರು – ಶ್ರೀ ಸುಬ್ರಹ್ಮಣ್ಯ ಜೋಶಿ ಕೋಡಿಗಾರ್