ನಮ್ಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆದಿತ್ತು. ಅದರಲ್ಲಿ ಮಾತನಾಡಿದ ಒಬ್ಬ ವಿದ್ಯಾರ್ಥಿನಿ ಹೇಳುತ್ತಿದ್ದಳು – “ಮೂರು ವರ್ಷ ಎಷ್ಟು ಬೇಗ ಕಳೆದು ಹೋಯಿತು!” ನಂತರ ಕೊನೆಯಲ್ಲಿ ಆಶೀರ್ವಚನ ಮಾಡುತ್ತಾ ನಾವು ನೀಡಿದ ಪ್ರತಿಕ್ರಿಯೆ – “ಮೂರು ವರ್ಷ ಮೂರು ವರ್ಷಕ್ಕೇ ಕಳೆಯಿತು, ಒಂದು ವರ್ಷಕ್ಕಲ್ಲ. ಕಾಲದ ಗತಿಯಲ್ಲಿ ವೇಗ ಹೆಚ್ಚುವುದು ಅಥವಾ ಕಡಿಮೆಯಾಗುವುದು ಇಲ್ಲ.”
ಕಾಲದ ಗತಿಯಲ್ಲಿ ವ್ಯತ್ಯಾಸವಾಗದಿದ್ದರೂ ’ಎಷ್ಟು ಬೇಗ ಕಳೆಯಿತು!’ ಎಂಬುದಾಗಿ ಅಥವಾ ’ಒಂದು ದಿನ ಕಳೆಯುವುದು ಅಂದರೆ ಒಂದು ವರ್ಷ ಕಳೆದ ಹಾಗೆ ಆಯಿತು!’ ಎಂಬುದಾಗಿ ಉದ್ಗರಿಸುವ ರೂಢಿ ನಮ್ಮಲ್ಲಿದೆ. ಒಂದೇ ಗತಿಯಲ್ಲಿ ಸಾಗುತ್ತಿರುವ ಕಾಲದ ಬಗ್ಗೆ ಹೀಗೇಕೆ ಉದ್ಗಾರ ಬರುತ್ತದೆ? ಸಂತೋಷದಲ್ಲಿ ಮುಳುಗಿ ಕಾಲ ಕಳೆಯುತ್ತಿರುವಾಗ ಕಾಲದ ಬಗ್ಗೆ ಗಮನವಿರುವುದಿಲ್ಲ. ಹಾಗಾಗಿ ಬೇಗ ಕಳೆದಂತೆ ಭಾಸವಾಗುತ್ತದೆ. ನಿದ್ರೆಯಲ್ಲಿ ಮುಳುಗಿ ಕಾಲ ಕಳೆದಾಗ ರಾತ್ರಿ ಬೇಗ ಕಳೆದಂತೆ ಅನಿಸುತ್ತದೆ. ಹಾಗೆಯೇ ಇದು. ಬೇಸರದಲ್ಲಿ ಕಾಲ ಕಳೆಯುತ್ತಿರುವಾಗ ಕಾಲದ ಬಗ್ಗೆ ಮತ್ತೆ ಮತ್ತೆ ಗಮನ ಹೋಗುವುದರಿಂದ ದೀರ್ಘವಾಗಿ ಕಳೆದಂತೆ ಭಾಸವಾಗುತ್ತದೆ. ಆದ್ದರಿಂದ ಮನಸ್ಸಿನ ಹರ್ಷ-ಬೇಸರಗಳೇ ಕಾಲದ ಹೃಸ್ವ-ದೀರ್ಘ ಅನುಭವಗಳಿಗೆ ಕಾರಣ. ಸಂತೋಷದಿಂದ ಕಾಲ ಕಳೆದ ನಂತರ ’ಈ ಸಂತೋಷ ಮತ್ತೆ ಬರುವುದಿಲ್ಲವಲ್ಲ!’ ಎಂಬ ಖೇದವಿರುತ್ತದೆ. ಬೇಸರದಿಂದ ಕಾಲವು ಕಳೆದ ನಂತರ ’ಅಂತು ಈ ಬೇಸರ ಮುಗಿಯಿತಲ್ಲ!’ ಎಂಬ ಸಮಾಧಾನದ ಭಾವವಿರುತ್ತದೆ. ಹೀಗೆ ಸಂತೋಷದಲ್ಲಿ ಕಾಲ ಕಳೆದರೆ ಕೊನೆಯಲ್ಲಿ ಖೇದ, ಬೇಸರದಿಂದ ಕಾಲ ಕಳೆದರೆ ಕೊನೆಯಲ್ಲಿ ಸಮಾಧಾನ. ಈ ಖೇದ-ಸಮಾಧಾನಗಳು ಬಹುತೇಕ ಕೆಲವೇ ಸಮಯದವರೆಗೆ ಮಾತ್ರ ಇದ್ದಿರುತ್ತದೆ.
ಆದರೆ ಸಂತೋಷದಲ್ಲಿ ಕಾಲ ಕಳೆಯುತ್ತಿರುವಾಗ ತಪ್ಪು ಕೆಲಸಗಳಾಗಿದ್ದರೆ ಆ ಸಮಯದಲ್ಲಿ ಏನೂ ಅನಿಸಲಾರದು. ಸಂತೋಷದ ಅವಧಿ ಮುಗಿದ ನಂತರ ಹಿಂದೆ ಆದ ತಪ್ಪಿನ ಬಗ್ಗೆ ’ಇದು ತಪ್ಪು’ ಎಂಬ ಅರಿವು ಮೂಡುತ್ತದೆ. ತಪ್ಪಿನ ಬಗ್ಗೆ ಪಶ್ಚಾತ್ತಾಪ ಶುರುವಾಗುತ್ತದೆ. ಕೆಲವೊಮ್ಮೆ ಈ ಪಶ್ಚಾತ್ತಾಪಕ್ಕೆ ಕೊನೆಯಿರುವುದಿಲ್ಲ. ಜೀವನ ಪರ್ಯಂತ ಪಶ್ಚಾತ್ತಾಪವೇ ಆಗಿರುತ್ತದೆ. ಬೇಸರದಿಂದ ಅಥವಾ ಕಷ್ಟದಿಂದ ಕಾಲ ಕಳೆದರೂ ಅಲ್ಲೆಲ್ಲೂ ತಪ್ಪುಗಳು ಆಗದಿದ್ದರೆ ಈ ಪಶ್ಚಾತ್ತಾಪವಿರುವುದಿಲ್ಲ.
ಸ್ವಲ್ಪ ಹೊತ್ತಿನ ಸಂತೋಷದ ಭರದಲ್ಲಿ ತಪ್ಪು ಅಥವಾ ಪ್ರಮಾದವಾದರೆ ಅನಂತ ಕಾಲದವರೆಗೆ ಪಶ್ಚಾತ್ತಾಪ. ಅದೇ ಸ್ವಲ್ಪ ಕಷ್ಟ ಪಡುತ್ತ ಸ್ವಲ್ಪ ಕಾಲ ಕಳೆದಿದ್ದರೆ ಜೀವನ ಪರ್ಯಂತ ತಾನು ಕಷ್ಟ ಪಟ್ಟಿದ್ದರ ಬಗ್ಗೆ ಸಂತೃಪ್ತಿ ಇರುತ್ತದೆ. ಹಾಗಾಗಿ ಸ್ವಲ್ಪ ಕಾಲವಾದರೂ ತಾತ್ಕಾಲಿಕ ಸಂತೋಷದ ಅಪೇಕ್ಷೆ ಪಡದೆ ತಪ್ಪುಗಳಾಗದಿದ್ದಂತೆ ನೋಡಿಕೊಂಡು ಕರ್ತವ್ಯದಲ್ಲಿ ತೊಡಗುವುದು ಉತ್ತಮ. ಅದರಿಂದ ಮುಂದೆ ಅನಂತ ಆನಂದವಿದೆ.
“ಯತ್ತದಗ್ರೇ ವಿಷಮಿವ ಪರಿಣಾಮೇ ಅಮೃತೋಪಮಮ್ | ತತ್ ಸುಖಂ ಸಾತ್ತ್ವಿಕಂ ಪ್ರೋಕ್ತಮ್ ಆತ್ಮಬುದ್ಧಿಪ್ರಸಾದಜಮ್ ||”
ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||
-ಕೃಪೆ: ಸಂಯುಕ್ತ ಕರ್ನಾಟಕ