ಭಾರತೀಯತೆಗೆ ಶ್ರೀ ಶಂಕರ ಭಗವತ್ಪಾದರು ಕೊಟ್ಟ ದಿವ್ಯ ಭಾಷ್ಯ

posted in: Gurubodhe | 0

ಜಗತ್ತಿನ ದಾರ್ಶನಿಕರಲ್ಲಿ ಅಗ್ರಗಣ್ಯರಾದ ಶ್ರೀ ಶಂಕರಾಚಾರ್ಯರ ಜಯಂತಿ (ಈ ಸಲ ಮೇ 2 ಶುಕ್ರವಾರ) ಹತ್ತಿರ ಬರುತ್ತಿದೆ. ವೈದಿಕ ವಾಙ್ಮಯಕ್ಕೆ ಅಂದಿನ ಕಾಲಕ್ಕೆ ಹೊಸತೆನ್ನಬಹುದಾದ ವಿಶಿಷ್ಟ ವ್ಯಾಖ್ಯಾನವನ್ನು ಅವರು ನೀಡಿದರು. ಉಪನಿಷದ್ ಭಾಷ್ಯ, ಬ್ರಹ್ಮಸೂತ್ರಭಾಷ್ಯ ಮತ್ತು ಗೀತಾಭಾಷ್ಯಗಳಲ್ಲಿ ಅವರ ಈ ವ್ಯಾಖ್ಯಾನ ಕೌಶಲವನ್ನು ನಾವು ಕಾಣುತ್ತೇವೆ. ಭಾರತದ ಸಮಗ್ರತೆಗೆ ಶ್ರೀ ಶಂಕರಾಚಾರ್ಯರ ಕೊಡುಗೆ ವಿಶಿಷ್ಟವಾದದ್ದು.

ಶ್ರೀ ಶಂಕರ ಭಗವತ್ಪಾದರು ಉಪನಿಷತ್ತು , ಬ್ರಹ್ಮಸೂತ್ರ ಮತ್ತು ಗೀತೆಗಳಿಗೆ ಬರೆದ ಭಾಷ್ಯಗಳು ಮುಂದಿನ ಎಲ್ಲಾ ಭಾಷ್ಯಕಾರರಿಗೆ ಪೀಠಿಕೆಯಂತಾಗಿದೆ. ಮುಂದೆ ಬಂದ ಬಹುತೇಕ ಎಲ್ಲ ಭಾಷ್ಯಕಾರರು ಒಂದಲ್ಲ ಒಂದು ರೀತಿಯಲ್ಲಿ ಅವರ ಭಾಷ್ಯಗಳನ್ನು ಅವಲಂಬಿಸುತ್ತಾರೆ. ವೇದಗಳಿಗೆ ಭಾಷ್ಯಗಳನ್ನು ಬರೆದ ಕರ್ನಾಟಕದವರೇ ಆದ ಸಾಯಣರು ವೇದ ವಾಕ್ಯಗಳಿಗೆ ಅರ್ಥ ಬರೆಯುವಾಗ ಅಲ್ಲಲ್ಲಿ ಶಂಕರಾಚಾರ್ಯರ ಅರ್ಥವಿವರಣೆಯನ್ನು ಉಲ್ಲೇಖಿಸಿದ್ದಾರೆ. ವೇದಗಳಲ್ಲಿಯೇ ಉಪನಿಷತ್ತುಗಳು ಬರುವುದರಿಂದ ಉಪನಿಷತ್ತುಗಳಿಗೂ ಸಾಯಣಭಾಷ್ಯವಿದೆ. ಉಪನಿಷತ್ತುಗಳಿಗೆ ಅರ್ಥವಿವರಣೆ ನೀಡುವಾಗ ಶ್ರೀ ಶಂಕರರ ಚಿಂತನಾ ಶೈಲಿಯನ್ನೇ ಇಟ್ಟುಕೊಂಡಿರುವುದು ಕಂಡುಬರುತ್ತದೆ. ಹೀಗೆ ವೇದಗಳಿಗೆ ಅರ್ಥ ಮಾಡುವ ವಿಶಿಷ್ಟ ಕ್ರಮದ ಮೊದಲ ಆವಿಷ್ಕಾರವಾದದ್ದು ಶ್ರೀ ಶಂಕರರಿಂದ. ಇಂದಿಗೂ ಅದೇ ಕ್ರಮ ಮುಂದುವರೆದಿದೆ.

ಅವರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತವು ಮೊದಲೇ ಇತ್ತು. ಶ್ರೀ ವೇದವ್ಯಾಸರು, ಶುಕ ಮಹರ್ಷಿಗಳು, ಗೌಡಪಾದಾಚಾರ್ಯರು ಮುಂತಾದ ಹೆಸರುಗಳು ಶ್ರೀ ಶಂಕರಾಚಾರ್ಯರಿಗಿಂತ ಹಿಂದೆ ಬರುತ್ತದೆ. ಅದೇ ಅದ್ವೈತ ಸಿದ್ಧಾಂತಕ್ಕೆ ಹೊಸ ರೂಪವನ್ನು ಕೊಟ್ಟವರು ಶ್ರೀ ಶಂಕರರು. ಬಾಕಿ ದಾರ್ಶನಿಕರ ಪ್ರಬಲ ಪ್ರಶ್ನೆಗಳಿಗೆ ಅದಕ್ಕಿಂತ ಪ್ರಬಲವಾದ ಉತ್ತರಗಳನ್ನು ಕೊಟ್ಟು ವಾದಸರಣಿಯಲ್ಲಿ ಗಟ್ಟಿಯಾಗಿ ನಿಲ್ಲುವಂತಹ ಶೈಲಿಯಲ್ಲಿ ಅವರು ಅದ್ವೈತ ಸಿದ್ಧಾಂತವನ್ನು ನಿರೂಪಿಸಿದರು.

ಆ ಕಾಲದಲ್ಲೇ ಸಮಗ್ರ ಭಾರತವನ್ನು ಕಾಲ್ನಡಿಗೆಯಲ್ಲೇ ಸಂಚರಿಸುವ ಮೂಲಕ ಭಾರತ ದೇಶದ ವ್ಯಾಪ್ತಿಯನ್ನು ಸ್ಪಷ್ಟವಾಗಿಸಿದರು. ಇಂದಿನ ಕಾಶ್ಮೀರ, ಪಾಕ್ ಆಕ್ರಮಿತ ಕಾಶ್ಮೀರ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶಗಳನ್ನು ಒಳಗೊಂಡ ವಿಸ್ತಾರವಾದ ದೇಶವನ್ನು ಅವರು ಸಂಚರಿಸಿದ್ದರಿಂದ ಇವೆಲ್ಲವೂ ಭಾರತ ದೇಶವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ. ಇವತ್ತಿನ ಪರಿಸ್ಥಿತಿಯಲ್ಲಿ ಕಾಶ್ಮೀರದಲ್ಲಿ ಯಾವ ಕ್ಷಣದಲ್ಲೂ ಯುದ್ಧವಾಗಬಹುದಾದ ವಾತಾವರಣವಿದೆ. ಯಾವುದೇ ಪರಿಸ್ಥಿತಿ ಬಂದರೂ ಶ್ರೀ ಶಂಕರರು ಕಾಶ್ಮೀರದಲ್ಲಿ ನಿರ್ಮಿಸಿದ ಪವಿತ್ರ ಸ್ಥಾನಗಳು ರಕ್ಷಿತವಾಗಲಿ, ಮತ್ತೆ ಉರ್ಜಿತಾವಸ್ಥೆಗೆ ಬರಲಿ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ