ಮನಸ್ಸಿದ್ದರೆ ಮಾರ್ಗ

posted in: Gurubodhe | 0

ಮನಸ್ಸಿದ್ದರೆ ಮಾರ್ಗ ಎಂಬುದಾಗಿ ಪ್ರಸಿದ್ಧವಾದ ನಾಣ್ಣುಡಿ ಇದೆ. ಸಮಸ್ಯೆಗಳಿಗೆ ಸಿಲುಕಿ ದಾರಿ ಕಾಣದ ಸ್ಥಿತಿಗೆ ಬಂದಾಗ ಈ ಮಾತನ್ನು ಹೇಳುತ್ತಾರೆ. ಹಾಗಾದರೆ ಮನಸ್ಸು ಇಲ್ಲದ ಸ್ಥಿತಿ ಎಂದರೇನು? ಮನಸ್ಸಿನ ಅಸ್ತಿತ್ವವೇ ಇಲ್ಲದ ಸ್ಥಿತಿಯೇ?

ಅಲ್ಲ, ಸಮಸ್ಯೆಗಳು ಮುತ್ತಿಕೊಂಡ ಮಾತ್ರಕ್ಕೆ ಮನಸ್ಸಿನ ಅಸ್ತಿತ್ವವೇ ಹೋಗಿ ಬಿಡುವುದಿಲ್ಲ. ಮನಸ್ಸು ಸರಿಯಾದ ಸ್ಥಿತಿಯಲ್ಲಿ ಇಲ್ಲ ಎಂಬುದನ್ನು ಮನಸ್ಸಿಲ್ಲ ಎಂಬ ಶಬ್ದದಿಂದ ಹೇಳುತ್ತಾರೆ. ಹಾಗೆಯೇ ಮನಸ್ಸು ಸರಿಯಾಗಿದ್ದ ಸ್ಥಿತಿಯನ್ನು ಮನಸ್ಸಿದ್ದ ಸ್ಥಿತಿಯೆಂದು ಹೇಳುತ್ತಾರೆ. ನಿದ್ರೆ – ಪ್ರಮಾದ – ಆಲಸ್ಯ ಮುಂತಾದ ಮತ್ತು ಅನ್ಯಾನ್ಯ ಆಲೋಚನೆಗಳು – ಆತುರತೆ ಮುಂತಾದ ಅಡೆತಡೆಗಳು ಇಲ್ಲದ ಉತ್ಸಾಹಭರಿತ ಮನಸ್ಥಿತಿಯೇ ಮನಸ್ಸು ಸರಿಯಾಗಿದ್ದ ಸ್ಥಿತಿ. ಇಲ್ಲಿ ಪ್ರಮಾದ – ಆಲಸ್ಯ ಮುಂತಾದವುಗಳು ತಮೋ ಗುಣದ ವೃತ್ತಿಗಳು. ಆತುರತೆ ಮುಂತಾದವುಗಳು ರಜೋಗುಣದ ವೃತ್ತಿಗಳು. ಉತ್ಸಾಹ – ಏಕಾಗ್ರತೆ ಮುಂತಾದವುಗಳು ಸತ್ವಗುಣದ ವೃತ್ತಿಗಳು. ತಮೋಗುಣದ ಮತ್ತು ರಜೋಗುಣದ ವೃತ್ತಿಗಳು ಕಡಿಮೆಯಾಗಿದ್ದು ಸತ್ವಗುಣದ ವೃತ್ತಿಗಳು ಉತ್ತಮವಾಗಿದ್ದ ಸ್ಥಿತಿಯೇ ಮನಸ್ಸು ಸರಿ ಇದ್ದ ಸ್ಥಿತಿ. ಈ ಸ್ಥಿತಿಯನ್ನು ಇಟ್ಟುಕೊಂಡವನಿಗೆ ಅಥವಾ ಬೇಕೆಂದಾಗ ಪ್ರಯತ್ನ ಪೂರ್ವಕವಾಗಿಯಾದರೂ ತಂದುಕೊಳ್ಳುವವನಿಗೆ ಮುಂದಿನ ಮಾರ್ಗ ಸಿಕ್ಕೇ ಸಿಗುತ್ತದೆ.

ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಈ ಸ್ಥಿತಿ ಇರುತ್ತದೆ, ಸ್ವಲ್ಪ ಪ್ರಯತ್ನಿಸಿದರೂ ಬೇಗ ಬರುತ್ತದೆ. ದಿನಾಲೂ ಯೋಗಾಸನ ಪ್ರಾಣಾಯಾಮದಿಗಳನ್ನು ಮಾಡುವವನಿಗೆ ಈ ಸ್ಥಿತಿ ಕ್ರಮೇಣ ಬರುತ್ತದೆ. ತೀವ್ರ ಭಯ, ತುಂಬಾ ಶೋಕ, ಅತಿಯಾದ ಮನಸ್ತಾಪಗಳು ಮನಸ್ಸಿನ ಸರಿಯಾದ ಸ್ಥಿತಿಗೆ ಪ್ರಬಲ ವಿರೋಧಿಗಳು. ಇವುಗಳಲ್ಲಿ ಭಯ ಮತ್ತು ಶೋಕಗಳು ರಜೋಗುಣದಿಂದ ಕೂಡಿದ ತಮೋಗುಣದ ವೃತ್ತಿಗಳು. ಮನಸ್ತಾಪ ಎಂದರೆ ತೀವ್ರವಾದ ಬೇಸರ. ಗರ್ವ ಮತ್ತು ಮಮಕಾರಗಳಿಂದ ಬೇಸರ ಮತ್ತು ಮನಸ್ತಾಪಗಳಾಗುತ್ತವೆ. ಇವುಗಳೂ ರಜೋಗುಣ – ತಮೋಗುಣ ಮಿಶ್ರಣಗಳೇ ಆಗಿವೆ. ತೀವ್ರ ಭಯ – ಶೋಕ – ಮನಸ್ತಾಪಗಳಾದಾಗ ದಾರಿಕಾಣದಾಗುತ್ತದೆ. ಆಗ ಭಕ್ತಿಯೇ ಶರಣು ಡಿ.ವಿ.ಜಿ. ಹೇಳಿದ್ದಾರೆ. “ಸರ್ವರುಂ ಸಾಧುಗಳೆ ಸರ್ವರುಂ ಬೋಧಕರೆ l
ಜೀವನ ಪರೀಕ್ಷೆ ಬಂದಿದಿರು ನಿಲುವನಕ ll ಭಾವಮರ್ಮಂಗಳೇಳುವುವಾಗ ತಳದಿಂದ l
ದೇವರೇ ಗತಿಯಾಗ – ಮಂಕುತಿಮ್ಮll”
ದೇವರಲ್ಲಿ ಶರಣಾಗತಿ ಮನಸ್ಸಿಗೆ ಸರಿಯಾದ ಸ್ಥಿತಿ ಬರುವಂತೆ ಮಾಡುತ್ತವೆ. ಮನಸ್ಸಿನ ಮೇಲೆ ನಮ್ಮ ಹಿಡಿತಕ್ಕಿಂತ ಭಗವಂತನ ಹಿಡಿತವೇ ಹೆಚ್ಚಿಗೆ ಇದೆ. ನಾವು ಬಿಟ್ಟುಕೊಡದೇ ಹಿಡಿದುಕೊಂಡಿದ್ದರಿಂದ ಅವನ ಹಿಡಿತ ಗೊತ್ತಾಗುತ್ತಿಲ್ಲ. ದೇವರಲ್ಲಿ ಶರಣಾಗತಿ ನಮ್ಮ ಹರಿತವನ್ನು ಕಡಿಮೆ ಮಾಡಿ ಅವನ ಹಿಡಿತಕ್ಕೊಳಪಡುವಂತೆ ಮಾಡುತ್ತದೆ. ಆಗ ಮನಸ್ಸು ಹಗುರವಾಗಿ ದಾರಿಸಿಗುತ್ತದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು | ನಾರಾಯಣ ನಾರಾಯಣ ನಾರಾಯಣ ||

-ಕೃಪೆ: ಸಂಯುಕ್ತ ಕರ್ನಾಟಕ