ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಅದ್ಭುತ ಕರಸೇವೆ .

posted in: Articles, shishyasvikara | 0

ಮಹಾ ಸಂಸ್ಥಾನದಲ್ಲಿ ನಡೆದಂತಹ ಶಿಷ್ಯ
ಸ್ವೀಕಾರ ಮಹೋತ್ಸವ ಅತ್ಯದ್ಭುತ ಕಾರ್ಯಕ್ರಮಗಳಲ್ಲಿ ಒಂದು. ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶಿಷ್ಯ ಸ್ವೀಕಾರ ಮಾಡಿದರು ಈ ಸಂದರ್ಭದಲ್ಲಿ ಕರೆಸೇವಕರ ಮಹಾಪುರವೇ ಉಪಸ್ಥಿತವಾಗಿತ್ತು ಎಂದು ಹೇಳಿದರೆ ಆಶ್ಚರ್ಯವಲ್ಲ, ಸಣ್ಣ ಕೆಲಸ, ದೊಡ್ಡ ಕೆಲಸ ಎನ್ನದೆ ತನ್ನ ಸ್ವಂತ ಯಾವುದೇ ಗತ್ತು ಗುಮ್ಮಾನು ಇಲ್ಲದೆ ಶ್ರೀಮಠದ ಸೇವೆ ಎಂಬ ಮಹತ್ವದ ಉದ್ದೇಶದಿಂದ ಬೃಹತ ಕರಸೇವಾಪಡೆ ಇಲ್ಲಿ ಸೇವೆಯ ವಿರಾಟ ರೂಪದರ್ಶನವನ್ನು ಭಕ್ತಾದಿಗಳು ತೋರಿಸಿದರು.ಹೊರಗಿನಿಂದ ಬಂದಂತಹ ಪ್ರತಿ ಭಕ್ತರಿಗೂ ಸ್ವರ್ಣವಲ್ಲಿ ಮಠ ಪರಂಪರೆಯ ಮಹತ್ವದ ಸಾರಿ ಹೇಳುವಂತಹ ಸಂಧರ್ಭ. ಹೊರಗಿನಿಂದ ಬಂದಂತಹ ವ್ಯಕ್ತಿಯ ಸ್ವಾಗತದಿಂದಲೇ ಈಸೇವೆ ಪ್ರಾರಂಭವಾಗಿತ್ತು. ಬಂದಂತಹ ಭಕ್ತನಿಗೆ ಹಣೆಗೆ ಶ್ರೀಗಂಧದ ತಿಲಕವಿಟ್ಟು ಸ್ವಾಗತಿಸಿದ್ದು ಅತ್ಯಂತ ಗಮನಾರ್ಹ. ಹಣೆಗೆ ಇಟ್ಟಂತಹ ಗಂಧದ ತಿಲಕ ಶೀತಲ ಸಮಾಧಾನದ ಒಂದು ಅನುಭವವನ್ನು ಎಲ್ಲ ಬಂದಂತಹ ಭಕ್ತರ ಮನದಲ್ಲಿ ಮೂಡಿಸಿತು. ಅಷ್ಟೇ ಅಲ್ಲದೆ ಈ ತಿಲಕವನ್ನು ಸರಿಪಡಿಸುವ ಪಡಿಸಿಕೊಳ್ಳುವ ಗೋಚಿಗೆ ಯಾರು ಹೋಗಲಿಲ್ಲ ಯಾಕೆಂದರೆ ಆ ಶೀತಲ ಸಮಾಧಾನದ ಅನುಭವವನ್ನು ಅನುಭವಿಸುವ ಮಜವೇ ಬೇರೆಯಾಗಿತ್ತು. ಆನಂತರದಲ್ಲಿ ಇದ್ದಂತಹ ಪ್ರತಿ ಸೀಮೆಯ ಪ್ರತ್ಯೇಕ ಕೌಂಟರ್ ಸ್ವಾಗತಿಸಿ ಭಕ್ತರನ್ನು ಬರಮಾಡಿಕೊಂಡಿದ್ದು ಹಲವರ ಮನಸ್ಸಿಗೆ ಖುಷಿಯನ್ನು ಉಂಟು ಮಾಡಿದೆ. ಈ ಕೌಂಟರ್ಗಳ ನಂತರ ಇದ್ದದ್ದು ಎಳ್ಳು ತಂಪಿನ ಕೌಂಟರ್ ಅಲ್ಲಿರುವಂತಹ ಕರಸೇವಕರಿಂದ ಎಳ್ಳು ತಂಪು ಹೇಗೆ ಮಾಡುತ್ತಾರೆ ಏನೇನು ಘಟಕಗಳನ್ನು ಬಳಸಲಾಗುತ್ತದೆ ಶುದ್ಧ ಆಲೆಮನೆಯ ಬೆಲ್ಲವನ್ನೇ ಬಳಸಲಾಗುತ್ತದೆ ಎಂಬ ಮಾಹಿತಿ ನೀಡುತ್ತಿರುವುದು ಬಂದಂತಹ ಭಕ್ತರಿಗೆ ಎಳ್ಳು ತಂಪಿನ ಮಹತ್ವವನ್ನು ಸಾರುತ್ತಿತ್ತು. ಜೊತೆಗೆ ಅಲೆಮನೆ ಬೆಲ್ಲದ ಆರೋಗ್ಯದ ಮೇಲೆ ಉಂಟುಮಾಡುವ ಪರಿಣಾಮವನ್ನು ಹೇಳಿದ್ದು ನಮ್ಮ ಕಬ್ಬು ಬೆಳೆಗಾರ ರೈತರಿಗೆ ಮುಂದೊಂದು ದಿನ ವರದಾನವಾಗಬಹುದೇನೋ ಎನ್ನುವಂತಿತ್ತು. ಮೊದಲು ಹಣೆಗಿಟ್ಟಂತಹ ಗಂಧದ ತಿಲಕ ಆಮೇಲೆ ಹೊಟ್ಟೆಗೆ ಸೇರಿದ ಎಳ್ಳು ತಂಪು ಒಟ್ಟಾರೆಯಾಗಿ ಬಂದ ಭಕ್ತನಿಗೆ ಸಮಾಧಾನದ ಅನುಭವವನ್ನು ಉಂಟು ಮಾಡಿದ್ದಂತು ಹಲವು ಭಕ್ತರ ಅನುಭವದಲ್ಲಿ ಕೇಳಲ್ಪಟ್ಟಿದ್ದೇನೆ ‌. ಇಷ್ಟಾದ ನಂತರ ಮಹಾಸಂಸ್ಥಾನದ ಒಳಗಡೆ ಹೋದಾಗ ಅಲ್ಲಿ ಉಪಸ್ಥಿತರಿರುವಂತಹ ಭಕ್ತರಿಂದ ವಿವಿಧ ರೀತಿಯ ಸ್ವಾಗತಗಳು ಇಲ್ಲಿ ಹೋಗಿ ಅಲ್ಲಿ ಹೋಗಿ ಇದು ಈ ದೇವಸ್ಥಾನ ಇದು ಆ ದೇವಸ್ಥಾನ ಹೇಳುವಂತಹ ಮಾಹಿತಿ ಪೂರ್ಣ ಮಾತು ಹಲವರನ್ನು ಮಂತ್ರಮುಗ್ದನ್ನಾಗಿ ಮಾಡಿತು.ಕೆಲವು ಕರಸೇವಕರು ಇತರ ಊರಿನ ಭಕ್ತರಿಗೆ ಅಲ್ಲಿರುವ ಚಂದ್ರಮೌಳಿಶ್ವರ, ರಾಜರಾಜೇಶ್ವರಿ ,ಲಕ್ಷ್ಮಿ ನರಸಿಂಹ, ರತ್ನಗರ್ಭ ಗಣಪತಿ, ವ್ಯಾಸ ಮಹರ್ಷಿ ಹಾಗೂ ಈಶ್ವರ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಹಲವು ಭಕ್ತರಿಂದ ಪ್ರಶಂಸಿಲ್ಪಟ್ಟಿತು. ಇನ್ನು ಕೆಲವು ಕರಸೇವಕರು ಹೊರಗಿನಿಂದ ಬಂದಂತಹ ಭಕ್ತ ಮಹಾಜನರಿಗೆ ಗುರುಮೂರ್ತಿ ಮನೆಯನ್ನ ತೋರಿಸಿದ್ದು ಧನ್ಯತಾ ಭಾವನೆ ಹೊಂದಿದರು. ಇನ್ನೂ ಕೆಲವು ಕರಸೇವಕರು ಶ್ರೀ ಮಠದ ಪರಂಪರೆಯ ಬಗ್ಗೆ ಮಾಹಿತಿ ನೀಡಿದ್ದು ಮಹತ್ವಪೂರ್ಣವಾಗಿತ್ತು ಜೊತೆಗೆ ಶ್ರೀಮಠದ ಸಿಬ್ಬಂದಿಗಳ ಕಾರ್ಯತತ್ಪರತೆ ಮಹತ್ವದ್ದಾಗಿತ್ತು.ಒಂದು ರೀತಿಯಲ್ಲಿ ಸ್ವರ್ಣವಲ್ಲಿ ಮಹಾ ಸಂಸ್ಥಾನದ ವರ್ಚುಯಲ್ ಟೂರ್ ತರಹ ಇತ್ತು ಎಂದು ಕೆಲವು ಸಾಫ್ಟ್ವೇರ್ ಇಂಜಿನಿಯರ್ ಗಳ ಅಭಿಪ್ರಾಯವಾಗಿತ್ತು.

ಅಲ್ಲಲ್ಲಿ ಇರುವಂತಹ ಕರಸೇವಕರು ಬಂದಂತಹ ಭಕ್ತರಿಗೆ ಮಾತನಾಡಿಸುವ ಶೈಲಿ ಗಣನೀಯವಾಗಿ ಗುರುತಿಸಲ್ಪಟ್ಟಿತು. ಊಟೋಪಚಾರ ವಿಭಾಗದ ಕಡೆಗೆ ಹೋದರೆ ಪ್ರತಿಯೊಬ್ಬ ಕರಸೇವಕನೂ ಕೂಡ ಪ್ರಸಾದ ಸ್ವೀಕರಿಸಿದ್ದೀರಾ ಎಂದು ಕಾಳಜಿಯ ಮಾತು ಕೇಳುವವರೇ ಆಗಿದ್ದರು. ಊಟದಲ್ಲಿ ಇರುವಂತಹ ದೇಸಿ ಸೊಗಡನ್ನು ಹಲವು ಬೇರೆ ಊರಿನ ಭಕ್ತರು ಹೊಗಳುವುದರಲ್ಲಿ ಹಿಂಜರಿಯಲಿಲ್ಲ. ಊಟ ತಿಂಡಿ ವಿಭಾಗದಲ್ಲಿ, ಕುಡಿಯುವ ನೀರಿನ ವ್ಯವಸ್ಥೆಯೂ ಕೂಡ ಅತಿ ಹೆಚ್ಚು ಅಚ್ಚುಕಟ್ಟಾಗಿತ್ತು.
ಶಿಷ್ಯ ಸ್ವಿಕಾರ ಮಹೋತ್ಸವದ ಆಯೋಜನೆಯ ಸ್ಥಳಗಳಲ್ಲಿ ಸ್ವಚ್ಛತೆಯ ಬಗ್ಗೆ ವಿಶೇಷ ಗಮನ ನೀಡಿದ್ದು ಎದ್ದು ಕಾಣುತ್ತಿತ್ತು. ಒಂದು ಸಣ್ಣ ಪ್ಲಾಸ್ಟಿಕ್ ಚೂರು ಬೀಳದಂತೆ ವ್ಯವಸ್ಥಿತಗೊಳಿಸಿದ್ದು ಒಂದು ಸಣ್ಣ ಕಸ ಬಿದ್ದರೂ ಅದನ್ನು ಆರಿಸಲು ಜನರಿದ್ದದ್ದು ಹಲವರಿಂದ ಹೊಗಳಿಕೆಗೆ ಪಾತ್ರವಾಯಿತು.ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಅಲ್ಲದೇ ಧ್ವನಿ, ಬೆಳಕು, ವಿದ್ಯುತ್ ಅಲಂಕಾರ ಹೆಚ್ಚಿನ ಜನರ ಆಕರ್ಷಣೆಯ ಪ್ರಶಂಸೆಗೆ ಕಾರಣವಾಯಿತು. ಅಲ್ಲಲ್ಲಿಯ ಸೂಚನಾ ಫಲಕಗಳು ಹಾಗೂ ಧ್ವನಿ ಸೂಚನೆ ಉತ್ತಮ ಪರಿಣಾಮಕಾರಿಯಾಗಿತ್ತು.
ಅದ್ಭುತ ಪುಷ್ಪಾಲಂಕಾರ, ವಿದ್ಯುತ್ ದೀಪಾಲಂಕಾರ ಆಕರ್ಷಕವಾಗಿತ್ತು. ಇನ್ನು ಶ್ರೀಮಠದ ವಾದ್ಯ ,ವಾದ್ಯದ ಶೈಲಿ ಕೇಳುಗರ ಮನಸ್ಸಿಗೆ ಮುದನೀಡಿತ್ತು.

ಇನ್ನೂ ಗಣ್ಯಾತಿಗಣ್ಯರು ಭಾಗವಹಿಸಿದ್ದು ಎಲ್ಲರಿಗೂ ತಿಳಿದಿದೆ,ಅವರೂ ಕೂಡ ಸ್ವಯಂ ಕರಸೇವಕರಾಗಿದ್ದರು.

ಇದೇ ರೀತಿ ವ್ಯವಸ್ಥಿತ ಯೋಜನೆಯ ಅನುಸಾರವಾಗಿ ಪ್ರತಿ ವಾರಕ್ಕೊಂದು ಕರಸೇವಾಪಡೆ ರಚನೆಯಾಗಿ ಎಲ್ಲ ವಿಭಾಗಗಳಲ್ಲೂ ಉತ್ಸಾಹಿ ಯುವ ಕರಸೇವಕರು
ಸಿಬ್ಬಂದಿಗಳ ಸಹಕಾರದೊಂದಿಗೆ ಸೇವೆ ಸಲ್ಲಿಸುವಂತಾದರೆ ಎಲ್ಲರೂ ನೆನಪಿಸುವ ಶಿಷ್ಯ ಸ್ವೀಕಾರದ ಮೈಲುಗಲ್ಲು ಆಗಬಹುದು.
ಈಗ ನೀಡಿದ ಅದ್ಭುತ ಸೇವೆಯಂತೆ ಮುಂಬರುವ ದಿನಗಳಲ್ಲಿ ಮಠದಲ್ಲಿ ನಿರಂತರವಾಗಿ ಹಾಗೂ ನಿಯಮಿತವಾಗಿ ಸೇವೆ ಮಾಡುವ ವಿಧಾನಗಳನ್ನು, ನಮ್ಮ ಯುವ ಶಿಷ್ಯ ಸಮುದಾಯ ರೂಪಿಸಿಕೊಳ್ಳುತ್ತದೆ ಎಂದು ನಂಬಿದ್ದೇನೆ.

ದೊಡ್ಡ ಗುರುಗಳು ಶಿಷ್ಯ ಸ್ವೀಕಾರ ಮಾಡಿ ಸನ್ಯಾಸ ದೀಕ್ಷೆಯನ್ನು ನೀಡಿದಂತೆ ಕರಸೇವಕ ಭಕ್ತರ ಪಡೆಗೆ ಕರಸೇವಾ ದೀಕ್ಷೆ ನೀಡಿದಂತಾಗಿತ್ತು.ಹಲವರು ತಮ್ಮ ಜೀವಿತಾವಧಿಯಲ್ಲಿ ಕಣ್ತುಂಬಿ ಕೊಂಡಂತಹ ಅದ್ಭುತ ಆಯೋಜನೆ ಇದಾಗಿತ್ತು

✍️   ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯ ಶಿರಸಿ.